ಅನುಕಂಪದ ನೌಕರಿ : ಬದಲಾವಣೆ ತಂದ ಸರಕಾರ

Advertisements

ಸರಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಮೃತರ ಮಗಳಿಗೂ ನೀಡಬಹುದು ಎಂಬ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ.

ಕರ್ನಾಟಕ ಸಿವಿಲ್ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1966 ಕ್ಕೆ ತಿದ್ದುಪಡಿ ತಂದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶುಕ್ರವಾರ ತಿಳಿಸಿದೆ.

ಮೃತ ಸರಕಾರಿ ನೌಕರರ ಪತಿ ಅಥವಾ ಪತ್ನಿ ಸೂಚಿಸುವ ಅವಿವಾಹಿತ, ವಿವಾಹಿತ ಅಥವಾ ವಿಚ್ಛೇಧಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಬಹುದು ಎಂಬುದಾಗಿದೆ.

ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಸೂಚಿಸಿದ ಸಹೋದರ ಅಥವಾ ಸಹೋದರಿಯನ್ನು ನೇಮಕಾತಿ ಮಾಡಲು ಅವಕಾಶವಿದೆ. ಒಂದು ವೇಳೆ ತಂದೆ ತಾಯಿಯೂ ಮೃತಪಟ್ಟಿದ್ದರೆ ವಯಸ್ಸಿನ ಆಧಾರದ ಮೇಲೆ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಮೃತ ಪುರುಷ ವಿವಾಹಿತನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ಪತ್ನಿ, ಮಗ ಮತ್ತು ಮಗಳು ಅರ್ಹರಾಗಿರುತ್ತಾರೆ. ಮೃತನ ಪತ್ನಿಯು ಅರ್ಹರಾಗಿಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ.

ವಿವಾಹಿತ ಸರಕಾರಿ ಮಹಿಳಾ ಉದ್ಯೋಗಿ ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿರುವ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಾರೆ. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಅರ್ಹರಾಗಿರುತ್ತಾರೆ.

ಮೃತ ನೌಕರರ ಪತಿ ಅಥವಾ ಪತ್ನಿ ಈಗಾಗಲೇ ನಿಧನರಾಗಿದ್ದರೆ ಮಕ್ಕಳು ಅಪ್ರಾಪ್ತರಾಗಿದ್ದರೆ 2 ವರ್ಷದೊಳಗೆ 18 ವರ್ಷ ಪೂರೈಸುವವರಿಗೆ ಅವಕಾಶ ನೀಡಬಹುದು. 18 ವರ್ಷ ತುಂಬಿದ ಬಳಿಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು.

ಅಪ್ರಾಪ್ತ ಮಕ್ಕಳ ವಯಸ್ಸು ಸೂಕ್ತವಾಗಿಲ್ಲದಿದ್ದರೆ ಅವರೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಕಾನೂನಿನ ಪ್ರಕಾರ ಪ್ರಮಾಣೀಕೃತ ಪೋಷಕರು ಅರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *